Thursday, April 9, 2020

ಪ್ರೀತಿ ತಿರಸ್ಕೃತಗೊಂಡ ಮಾತ್ರಕ್ಕೆ
ಮನುಷ್ಯ ಸೋಲುವುದಿಲ್ಲ ಗೆಳೆಯ;
ಪ್ರೀತಿಸುವುದನ್ನು ಕಲಿತಿರುವುದೇ
ಅವನ ಬಹುದೊಡ್ಡ ಗೆಲುವು..
- ಎನ್.ಬಿ

Tuesday, April 7, 2020

ನೋಯಿಸುವುದು
ಮಾತುಗಳಷ್ಟೇ ಅಲ್ಲ ಗೆಳೆಯ;
ತುಂಬು ಕಂಗಳ ಹಿಂದಿನ ಮೌನವೂ ಕೂಡ..
- ಎನ್.ಬಿ
ಆಕರ್ಷಣೆಯಿಂದ ದೂರ
ಉಳಿಯಲು ನೀ ಮೌನಿಯಾದೆ..
ಆದರೆ ಈ ಕಂಗಳು ನಿನ್ನ
ಮೌನಕ್ಕೇ ಆಕರ್ಷಿತವಾದವು..
- ಎನ್.ಬಿ

ನಾನು ಮಿತಭಾಷಿಯಾಗುತ್ತಿದ್ದೇನೆ
ನನಗೆ ಮೌನವಿಷ್ಟವೆಂದಲ್ಲ;
ನಿನ್ನ ಮೌನ ಕದಡಬಾರದೆಂದು..
- ಎನ್.ಬಿ
ನಾವೆಲ್ಲರೂ ಕನ್ನಡಕ
ಧರಿಸಿದವರೇ ಈ ಜಗತ್ತಿನಲ್ಲಿ
ನನ್ನ ಕನ್ನಡಕದ ಮೇಲೆ
ಧೂಳು ಬಿದ್ದಿರಬಹುದು,
ಅದನ್ನೊರೆಸಲು ಮುಂದೆ ಬನ್ನಿ..
ಬದಲಾಗಿ ನಿಮ್ಮ ಕನ್ನಡಕವನ್ನೇ
ನೀಡುವ ಔದಾರ್ಯ ತೋರಬೇಡಿ..
- ಎನ್.ಬಿ

ನೂರು ಬಾರಿ ಕನ್ನಡಿಯ ನೋಡಿದೆ
ಬಿಟ್ಟ ಕಣ್ಣು ಮುಚ್ಚದೇ..
ಮುಖದ ಹೊರತು ಬೇರೇನೂ
ಕಾಣಲೇಯಿಲ್ಲ..
ಮನದ ಪ್ರತಿಬಿಂಬ ಕಾಣುವ
ಕನಸು ಕನಸಾಗಿಯೇ ಉಳಿಯಿತಲ್ಲ..
- ಎನ್.ಬಿ
ಯಾರೋ ಮುಚ್ಚಿದ ಮನೆಯ
ಬಾಗಿಲ ತೆರೆದ ನೀನು
ಒಂದು ಹಣತೆಯನ್ನಾದರೂ
ಹಚ್ಚಿಡಬಾರದೇಕೆ?
ಧೂಳು ತುಂಬಿದ ಆ ಮೊಗಸಾಲೆಯ
ಮತ್ತೆ ಸಿಂಗರಿಸಬಾರದೇಕೆ?
ನೀರವವಾಗಿರುವ ಮನೆಯೊಳಗೆ
ಗೆಜ್ಜೆಯ ಸದ್ದನ್ನಾದರೂ ಕೇಳಿಸಬಾರದೇಕೆ?
-ಎನ್.ಬಿ
ನನಗೆ ಸೊಕ್ಕು
ಅವಳಿಗೆ ಧಿಮಾಕು
ನಮ್ಮಲ್ಲಿಲ್ಲ ಒಡಕು
ಪ್ರೀತಿಯೊಂದೇ ನಮಗೆ ಬೆಳಕು
-ಎನ್.ಬಿ
ಕಲ್ಲಿನಲಿ ಹೂ ಅರಳುವುದಿಲ್ಲ
ಎಂಬ ನಿನ್ನ ಮಾತು ನಿಜ ಗೆಳೆಯ..
ಆದರೇ,
ಮಣ್ಣು ಸಹ ಕಲ್ಲಿನಿಂದಲೇ ಆದದ್ದಲ್ಲವೇ?
- ಎನ್.ಬಿ

ಒಂಟಿತನವೇ ಹೆಚ್ಚು
ಮಧುರವಾಗಿದೆ ಗೆಳೆಯ;
ಮಿಥ್ಯೆಗಳಾಚೆ ಬದುಕಬೇಕಿದೆ..
- ಎನ್.ಬಿ
ಭಯ ಹುಟ್ಟಿಸುವುದು
ಕಾವಳವಲ್ಲ ಗೆಳೆಯ;
ಮನಸ್ಸಿನ ಕಳವಳಗಳು..
- ಎನ್.ಬಿ
ಸೋಲನ್ನು ಅಣಕಿಸುತ್ತಿರುವುದು
ಶತೃಗಳಲ್ಲ ಗೆಳೆಯ;
ಕನ್ನಡಿಯಲ್ಲಿನ ನನ್ನದೇ ಪ್ರತಿಬಿಂಬ..
- ಎನ್.ಬಿ
ಬದುಕು ಬೇಸರಿಸುವುದು
ಕಷ್ಟಗಳಿಂದಲ್ಲ ಗೆಳೆಯ;
ಮುರಿದುಬಿದ್ದ ನಂಬಿಕೆಗಳಿಂದ..
- ಎನ್.ಬಿ
ತೇರು ಬೀದಿಯಲ್ಲಿ ತೇರು
ನೆನಪಾಗುವುದೇ ಇಲ್ಲ ಗೆಳತಿ
ನೆನಪಾಗುವುದು ತೆರಿನೆಡೆಗಿನ
ನಿನ್ನ ಕೌತುಕ ಕಂಗಳು ಮಾತ್ರ..
- ಎನ್.ಬಿ

ನಿನಗೆ ದ್ವೇಷವಿದ್ದದ್ದು
ನನ್ನ ಮೇಲೆಯೇ ನಿಜ.
ಆದರೆ,
ಸುಟ್ಟುಹೋದದ್ದು
ನಿನ್ನದೇ ನೆತ್ತರಲ್ಲವೇ ಗೆಳೆಯ..
- ಎನ್.ಬಿ
ಉತ್ತರಿಸುವುದು ಕಷ್ಟವಲ್ಲ
ಉತ್ತರಿಸದಿರುವುದೂ ಕಷ್ಟವಲ್ಲ..
ಉತ್ತರಕ್ಕಾಗಿ ಕಾಯುವುದು ಕಷ್ಟ..
- ಎನ್.ಬಿ
ಪ್ರೀತಿಗೆ ದ್ವೇಷದ ಹಂಗಿಲ್ಲ ಗೆಳೆಯ,
ಪ್ರೀತಿ ಪ್ರೀತಿಸುತ್ತದಷ್ಟೇ..
ಬಯಸಿದ್ದು ಸಿಕ್ಕರೂ; ಸಿಗದಿದ್ದರೂ..
- ಎನ್.ಬಿ

ಅವಳೊಂದಿಗಿನ ಹರಟೆಯಲಿ
ಆಡಲು ಮಾತುಗಳಿರದಿದ್ದರೂ
ಮತ್ತೆ, ಮತ್ತೆ ಎನ್ನವುದರಲ್ಲಿ
ಮ(ತ್ತು)ತ್ತೇನೋ ಇದೆ!
- ಎನ್.ಬಿ
ಮೂರ್ಖನೊಬ್ಬನಿಂದ
ಮೂರ್ಖನಾಗುತ್ತಿರುವುದ ಕಂಡಾಗಲೇ
ನೀ ಮೂರ್ಖನೆಂಬ ಅರಿವಾಗಿದ್ದು ಗೆಳೆಯ..
- ಎನ್.ಬಿ
ಗಾಂಧಿ,
ಮನುಷ್ಯನಲ್ಲಿನ ಒಳಿತನ್ನಷ್ಟೇ
ಹುಡುಕುವವನು ನೀನು
ಕ್ಷಮಿಸುವುದು ನಿನಗೆ ಕಷ್ಟವಲ್ಲ
ಎಲ್ಲದಕ್ಕೂ ಮೌನವಾಗಿರುವ ನಮಗೆ
ಕ್ಷಮೆ ಬೇಡುವ ಅರ್ಹತೆಯೇ ಉಳಿದಿಲ್ಲ.
- ಎನ್.ಬಿ

ಮರೆಯಬೇಕೆಂದರೆ
ಅಲಕ್ಷಿಸಿಬಿಡು ಗೆಳೆಯ..
ಮರೆಯಲು ಯತ್ನಿಸಿದಾಗಲೇ
ನೆನಪುಗಳು ಗಾಢವಾಗುವುದು
- ಎನ್.ಬಿ
ನಿನ್ನ ಗೆಲುವು ನನ್ನ
ಸೋಲಾದೀತಾದರೂ ಹೇಗೆ?
ಪ್ರತಿಬಾರಿ ನೀ ಗೆದ್ದು ಬೀಗಿದಾಗಲೂ
ಸಂಭ್ರಮಿಸುವುದು ನನ್ನದೇ ಹೃದಯವಲ್ಲವೇನು?
- ಎನ್.ಬಿ

ಇಲ್ಲಿ ದ್ವೇಷವೂ ದ್ವೇಷವನ್ನು
ಬಯಸಿಲ್ಲ ಗೆಳೆಯ;
ಅದಕ್ಕೂ ಪ್ರೀತಿಬೇಕಿದೆ.
- ಎನ್‌.ಬಿ
ನಾ ಕ್ರಮಿಸಿದ ದಾರಿ
ನನ್ನದಲ್ಲ ಗೆಳೆಯ;
ಯಾರನ್ನೋ ಸಂತೈಸುವಲ್ಲಿ
ನನ್ನ ದಾರಿಯೇ ನನಗೆ ಮರೆತಿದೆ
- ಎನ್.ಬಿ

ಇಲ್ಲಿ ನನ್ನ ಆತ್ಮವೂ ನಂಬಿಕೆಯಿಂದ
ಹೊರಗುಳಿದಿದೆ ಗೆಳೆಯ;
ನಂಬಿಕೆಯ ಸೌಧಗಳೆಲ್ಲಾ
ಸುಳ್ಳಿನ ಸಮಾಧಿಗಳಾಗಿಬಿಟ್ಟಿವೆ.
- ಎನ್.ಬಿ
ನಮ್ಮಿಬ್ಬರ ಕಥೆಯೂ
ಒಂದೇ ಗಾಲಿಬ್
ನಿನ್ನವಳ ಮರೆಯಲು
ನಿನಗೆ ಮದ್ಯವಿತ್ತು
ನನಗೆ ನಿನ್ನ ಕವನಗಳಿವೆ..
- ಎನ್.ಬಿ

Monday, April 6, 2020

ಸುಳ್ಳಿನ ಮಾರುಕಟ್ಟೆಯಲಿ
ಸತ್ಯಕ್ಕೆಲ್ಲಿಯ ಬೆಲೆ ?
ಉನ್ಮಾದಗೊಳಿಸುವ ಸುಳ್ಳುಗಳು
ಎಲ್ಲರ ಬಾಯಿ ಮುಚ್ಚಿಸಿರುವಾಗ
ಸತ್ಯದ ವ್ಯಾಪಾರವಾದೀತು ಹೇಗೆ?
ಸುಳ್ಳಿಗೆ ಸಾವಿರ ಸುಳ್ಳುಗಳ ಬೆಂಬಲವಿರುವಾಗ
ಅನಾಥವಾದ ಸತ್ಯ ಬಾಯ್ತೆರೆದೀತು ಹೇಗೆ?

- ನವೀನ ಬೂದನೂರು
ಅಂದದ ತನುವಿಗೆ
ಚಂದದ ಸೀರೆಯುಟ್ಟು
ಬಿಂಕದಿ ನಡೆಯುವವಳ
ಸುಳಿವೇ ಇಲ್ಲವಲ್ಲ ಬೀದಿಯಲ್ಲಿ

ಅದರಗಳ ನಡುವಲ್ಲಿ
ಬಾನಗಲ ನಗುಚೆಲ್ಲಿ
ಆದರದಿ ನೋಡುವವಳ
ಸುಳಿವೇ ಇಲ್ಲವಲ್ಲ ಬೀದಿಯಲ್ಲಿ

ಆಸೆಗಳ ಬಾಂದಳದಿ
ಬಣ್ಣಗಳ ಬೆಳಕುಚೆಲ್ಲಿ
ಹೃದಯವನ್ನು ಕದ್ದವಳ
ಸುಳಿವೇ ಇಲ್ಲವಲ್ಲ ಬೀದಿಯಲ್ಲಿ

- ನವೀನ ಬೂದನೂರು


ನಿನ್ನ ಹಾದಿಯನ್ನೇ ನಿರೀಕ್ಷಿಸುತ್ತಿದ್ದೆ
ನಿನ್ನ ಯಾವ ಸುಳಿವೂ ಅಲ್ಲಿರಲಿಲ್ಲ
ಎದೆಬಡಿತ ಹೆಚ್ಚುತ್ತಲೇಯಿತ್ತು
ಗಂಟೆಗಳು ಉರುಳಿದಂತೆಲ್ಲ..
ನಿನ್ನೆಡೆಗಿನ ತುಡಿತ ಇಮ್ಮಡಿಸುತ್ತಿತ್ತು
 ಸೂರ್ಯ ಮೇಲೆ ಏರಿದಂತೆಲ್ಲ...
ಹೊತ್ತು ಮುಳುಗುತ್ತಲೇಯಿತ್ತು
ಮನಸು ಕಾಯುತ್ತಲೇಯಿತ್ತು
ನೀನು ಮತ್ರ ಬರಲೇಯಿಲ್ಲವಲ್ಲ..
ನೆತ್ತಿಯ ಮೇಲಿದ್ದವನು ಮಾತ್ರ
ಜಾರುತ್ತಲೇಯಿದ್ದ ಅವನಿಗಾದರೂ ಯಾವ
ಸಂಕಟ ಒಂದೆಡೆ ಕುಳಿತು ಕಾಯಲು..!

- ನವೀನ ಬೂದನೂರು


ಶತೃವಿನ ಅಸಹಾಯಕತೆಯ
ಬಂಡವಾಳವಾಗಿಸಿಕೊಂಡವ
ಅವನ ಮನವ ಅರಿವನೇನು?

ಕೊಲೆ, ಸುಲಿಗೆಯಲ್ಲಿಯೇ
ತಲ್ಲೀನನಾದವನಿಗೆ ಅಂತಃಕರಣದ
 ಮಾತು ಕೇಳುವುದೇನು?

ರಕ್ತದ ದುರ್ಘಮ ಹತ್ತಿದವಗೆ
ಶಾಂತಿಯ ಪರಿಮಳ
ಹಿಡಿಸುವುದೇನು?

ದ್ವೇಷದ ಜ್ವಾಲೆಯ ಹೊದ್ದವಗೆ
ಪ್ರೀತಿಯ ತಂಗಾಳಿ
ಹಿತವಾಗುವುದೇನು?

ನರಕದಲ್ಲೇ ಸ್ವರ್ಗ ಕಂಡವಗೆ
ಸ್ವರ್ಗದ ಸುಖ
ರುಚಿಸುವುದೇನು?

- ನವೀನ ಬೂದನೂರು

ನೂರು ಬಾರಿ ಕನ್ನಡಿಯ ನೋಡಿದೆ
ಬಿಟ್ಟ ಕಣ್ಣು ಮುಚ್ಚದೇ..
ಮುಖದ ಹೊರತುಬೇರೇನೂ
 ಕಾಣಲೇಯಿಲ್ಲ...
ಮನದ ಪ್ರತಿಬಂಬ ನೋಡುವ
ಕನಸು ಕನಸಾಗಿಯೇ ಉಳಿಯಿತಲ್ಲ...

 - ನವೀನ ಬೂದನೂರು

ಅವಳೂ ನವಿಲುಗರಿಯೇ..
ಖಾಲಿಯಾಗಿದ್ದ ಹೃದಯಕ್ಕೆ
ಪ್ರೀತಿಯ ಬಣ್ಣ ಲೇಪಿಸಿದವಳು..
ಮೌನದಿಂದ ಮನವ ಸವರಿ
ಪ್ರೇಮರಂಗೋಲಿ ಗೀಚಿದವಳು...
ಕಣ್ಣಂಚಲ್ಲಿ ಮುಗುಳ್ನಕ್ಕು
ಎದೆಯ ಬಡಿತ ಹೆಚ್ಚಿಸಿದವಳು..

- ನವೀನ ಬೂದನೂರು





ನೀವು ಹೊಟ್ಟೆತುಂಬಿದವರು ಹೇಳುತ್ತೀರಿ
ಹಣದಿಂದ ಸಂತಸವ ಕೊಳ್ಳಲಸಾದ್ಯವೆಂಬ ಮಾತನ್ನು
ದವಾಖಾನೆಗೆ ಕಟ್ಟಲು ಹಣವಿಲ್ಲದೇ ತನ್ನವರನ್ನು
ಕಳೆದುಕೊಂಡವರು ಹೇಳುವರೇನು ಈ ಮಾತನ್ನು..?
ಸಾಲಭಾದೆಯಿಂದ ನೊಂದು ಆತ್ಮಹತ್ಯೆಗೆ ಶರಣಾದ
ರೈತನ ಮನೆಯರು ಹೇಳಿಯಾರೇನು ಈ ಮಾತನ್ನು..?
ಖಾಸಗಿ ಸಂಸ್ಥೆಗಳಲ್ಲಿ ಅಲ್ಪಹಣಕ್ಕೆ ಬೆಟ್ಟದಷ್ಟು ಕೆಲಸ ಮಾಡುವ ನೌಕರ ಹೇಳಿಯಾನೇನು ಈ ಮಾತನ್ನು..?
ಹಣವಿಲ್ಲದೇ ಮಕ್ಕಳಿಗೆ ಶಿಕ್ಷಣಕೊಡಿಸಲಾಗದ ಪೋಷಕರು ಹೇಳಿಯಾರೇನು ಈ ಮಾತನ್ನು..?
ಒಂದೊತ್ತಿನ ಊಟಕ್ಕೂ ಗತಿಯಿಲ್ಲದೇ ಬಿಕ್ಷೆಬೇಡಿ ಬದುಕುವ ಜನ ಹೇಳಿಯಾರೇನು ಈ ಮಾತನ್ನು..?

ಹೊಟ್ಟೆತುಂಬಿದ ನಿಮಗೇನು ಗೊತ್ತು ಹಣದಿಂದ ಸಿಗುವ ಸಂತಸ..
ಒಂದೊಂದು ಪೈಸೆಗೂ ಲೆಕ್ಕಹಾಕುವ ನನ್ನಂತಹ ನರಮಾನವನಿಗೆ ಗೊತ್ತು ಅದರ ಉತ್ಸಾಹ ಉಲ್ಲಾಸ..

- ನವೀನ ಬೂದನೂರು


ನಿನ್ನ ಕೈಯ್ಯ ನವಿಲುಗರಿ
ಎನ್ನ ಮೈಯ್ಯ ಸೋಕಿದಂದೇ
ಮನದ ಒಲವು ಹೂವಾಗಿ ಅರಳಿ
ನಿನ್ನೆಡೆಗೆ ಸೆಳೆದದ್ದು ಗೆಳತಿ..

- ನವೀನ ಬೂದನೂರು

ಕನ್ನಡಿಯಲ್ಲಿ ನನ್ನ ನೋಡುವಾಸೆ
ನಿಮ್ಮ ಕನ್ನಡಿಯಲ್ಲಿ ಚೌಕಟ್ಟಿದ್ದರೆ
ದಯವಿಟ್ಟು ಅದರಲ್ಲಿ ನನ್ನ ಬಂಧಿಸಬೇಡಿ
ನನಗೆ ಬೇಕಿರುವುದು ಚೌಕಟ್ಟಿಲ್ಲದ
ಅದರ ಅಂಚು ಸಹ ಕಾಣದ ಕನ್ನಡಿ
ನಾನಿರುವಂತೆಯೇ ನನ್ನ ತೋರಿಸುವ ಕನ್ನಡಿ

- ಎನ್. ಬಿ

ಕಾವಲುಗಾರನಿಲ್ಲದ ಈ ಹೃದಯ
ತೆರೆದೇಯಿರುವುದಿದು ಎಂದಿಗೂ
ಬಂದವರು ಬರಲಿ
ಅವರಿಗಿದೋ ಸುಸ್ವಾಗತ..
ಹೊರಡುವವರು ಹೋಗಲಿ
ಅವರಿಗಿದೋ ಶುಭ ವಿದಾಯ..

- ನವೀನ ಬೂದನೂರು
ಭಾವನೆಯ ಆಗಸದಲಿ
ಆಸೆಗಳ ಮೋಡ ಕಟ್ಟಿ
ಪ್ರೀತಿಯ ಮಳೆ ಸುರಿಯುವ
ಮುನ್ನವೇ..ಮರೆಯಾದೆಯೇತಕೆ?

ಮಳೆಯ ಹನಿಯು ಭೂಮಿಗಿಳಿದು
ಒಲವಿನ ಮರ ಚಿಗುರೊಡೆದು
ಮಿಗ-ಖಗಗಳಿಗಾಸರೆಯಾಗುವ
ಮುನ್ನವೇ....ಮರೆಯಾದೆಯೇತಕೆ?

ರಚನೆ: ನವೀನ ಬೂದನೂರು
ಶತಮಾನಗಳು ಉರುಳಿದರೇನು?
ಕಾಲಗಳು ಬದಲಾದರೇನು?
ನಿನ್ನ ಮೇಲಿನ ಕ್ರೌರ್ಯ ನಿಂತಿದೆಯೇನು?
ಸ್ತ್ರೀಯಾಗಿ ಹುಟ್ಟಿರುವುದೇ ನಿನ್ನ ತಪ್ಪೇನು?

ಸಹನಶೀಲಳಾಗಿ ಉಳಿಯುವೆ
ಮಹಾಮಾಯಿಯಾಗಿ ಬೆಳಗುವೆ
ತ್ಯಾಗಜೀವಿಯಾಗಿ ಬಾಳುವೆ
ಅವರ ಮೂಗಿನ ನೇರಕ್ಕೆ ನೀನಿದ್ದರೆ

ರಕ್ಕಸಿಯ ಪಟ್ಟ ಪಡೆಯುವೆ
ಚಾರಿತ್ರ್ಯವ ಕಳೆದುಕೊಳ್ಳುವೆ
ಅಶ್ಲೀಲ ಪದಗಳಿಗೆ ಗುರಿಯಾಗುವೆ
ದೌರ್ಜನ್ಯದ ವಿರುದ್ಧ ತಿರುಗಿ ಬಿದ್ದರೆ

ನಾನಂತೂ ನಿನ್ನ ಪೂಜಿಸುವೆ
 ಗೌರವಿಸಿ ಬಾಳುವೆ
ನೀ ಸಹಿಸಿದ ಅನ್ಯಾಯವ ನನೆದು..

- ನವೀನ ಬೂದನೂರು
ಯಾರು ಪ್ರೀತಿಸಿದರೇನು?
 ದ್ವೇಷಿಸಿದರೇನು?
ಯಾರು ಜೊತೆಗಿದ್ದರೇನು?
ದೂರಾದರೇನು?
ಎಲ್ಲವೂ ಇದ್ದರೇನು?
ಇರದಿದ್ದರೇನು?
ಒಳಿತಾದರೇನು?
 ಕೆಡುಕಾದರೇನು?
ಬದುಕು ನಿಲ್ಲುವುದೇನು?
ನೋವಿನ ಮರದಲ್ಲಿ
ಸಂತಸ ಚಿಗುರೊಡೆಯದೇನು?

ರಚನೆ: ನವೀನ ಬೂದನೂರು



ಕಣ್ಣ ಕಂಬನಿಯೊರೆಸಿ
ಗಾಯಗೊಂಡ ಹೃದಯಕೆ
ಮುಲಾಮು ಹಚ್ಚಿ
ನಿರುತ್ಸಾಹಿಯಾದವನಿಗೆ
ಉತ್ಸಾಹ  ತುಂಬಿ
ಗೆಲುವಿನ ಹಾದಿಗೆ
ಜೊತೆಯಾಗಿ
ಸೋತ ಮನಸಿಗೆ
ಸಮಾಧಾನ ನೀಡಿ
ಬೇಸರಗೊಂಡ ಜೀವಕೆ
ನಗೆಯ ಅಮೃತವನಿತ್ತ
ಸ್ನೇಹ ಅಮರವಾಗಲಿ..

ರಚನೆ: ನವೀನ ಬೂದನೂರು
ಅದೆಷ್ಟೋ ಭಾವನೆಗಳ
ಹಂಚಿಕೊಳ್ಳ ಬಯಸಿದ್ದೆ
ಅದಕ್ಕೆಂದಿಗೂ ನೀ
ಅವಕಾಶವನ್ನೇ ನೀಡಲಿಲ್ಲ
ಭಾವನೆಗಳ ವಿನಿಮಯಕ್ಕೆ ಬಂದ
ನನಗೆ ದೊರೆತದ್ದು ನಿರಾಸೆ; ಹತಾಶೆ
ಅದೆಷ್ಟು ಬಾರಿ ಮನ ನಿನಗೆಂದು
ಮಿಡಿಯಿತೋ,
ನಿನ್ನೊಲವಿಗಾಗಿ ತುಡಿಯಿತೋ
ತುಡಿದು ಮಿಡಿದ ಮನ ಇಂದು
ಮೂಕವಾಗಿ ಕುಳಿತಿದೆ..
ಮನದ ವಿರುದ್ಧ ಮಾತುಗಳು
ಪ್ರತಿಭಟನೆಗಿಳಿದಿವೆ;
ಮೌನಕ್ಕೆ ಜಾರಿವೆ...

ರಚನೆ: ನವೀನ ಬೂದನೂರು

ನೀ ನಗೋದ ನೋಡಿನ
ನಿನ್ ಪ್ರೀತಿ ಮಾಡಕ ಶುರು
ಮಾಡಿದಾವ ನಾನು
ನನ್ ಪ್ರೀತಿ ನಿನಿಗ್ಯ ಬ್ಯಾಡಾತು
ಅಂತಾ ನಿನ್ ನೋಯ್ಸಿದ್ರಾ
ಶಿವ ಮೆಚ್ತಾನೇನು?
ನೀ ಎಲ್ಲಿದ್ರೂ ಚಲೋ ಇರ್ಬೇಕು
ಅಂತಾ ಮೊದ್ಲು ಬಯಸೋವ್ನ ನಾನು
ನನಿಗಲ್ದಿದ್ರು ನಿನಿಗೋಸ್ಕರನರ
ನೀನು ನಕ್ಕಂತ ಇರಾದಿಲ್ಲೇನು?

ರಚನೆ: ನವೀನ ಬೂದನೂರು

ಅಂತರಾಳದ ದನಿ ಅಡಗಿಸುವಿರೇನು?

ಬಾಯಿ ಮುಚ್ಚಿಸುವವರು
ಅಂತರಾಳದ ದನಿ ಅಡಗಿಸುವರೇನು?
ದಬ್ಬಾಳಿಕೆಯ ಅಸ್ತ್ರದಿಂದ
 ಮನಸ್ಸುಗಳ ಗೆಲ್ಲಬಲ್ಲರೇನು?
ದೌರ್ಜನ್ಯವೆಸಗುವವರು
ಜನರ ಪ್ರೀತಿಯಗಳಿಸುವರೇನು?
ಅವರು ಮರೆತಿರುವಿರೇನೋ
ಅನ್ಯಾಯ, ಅಧರ್ಮಗಳು ಬಹುಕಾಲ
ಬಾಳಲಾರವೆಂದು..
ಸತ್ಯ, ನ್ಯಾಯ, ಧರ್ಮಗಳೇ ಶಾಶ್ವತವೆಂದು..
ಸುಳ್ಳಾಡುವ ನೂರು ಜನರ
ನಾಯಕನಾಗುವುದಕ್ಕಿಂತ
ಸತ್ಯವಾಡುವ ಒಬ್ಬನ
ನಾಯಕನಾಗುವುದು ಲೇಸೆಂದು
ಇದ ತಿಳಿದವನು ಈ ಜಗವ ಗೆದ್ದಾನು
ತನ್ನ ಗುರಿ ತಲುಪಿಯಾನು...

ರಚನೆ: ನವೀನ ಬೂದನೂರು
ಇನ್ನೆಷ್ಟು ಕಾಲ ನಿನ್ನೊಡನಿದ್ದೇನು?
ನಿನ್ನ ಭೇಟಿಯಾದೇನು?
ದೂರವಿಲ್ಲ ಗೆಳತಿ
ನಮ್ಮನ್ನಗಲಿಸುವ ದಿನ
ಕಣ್ಣಂಚಿನಲ್ಲೇ ಜಿನುಗುತ್ತಿದ್ದ ಪ್ರೀತಿ
ಕಣ್ಮರೆಯಾಗುವ ದಿನ
 ಹೃದಯಗಳ ಮೌನ ಸಂಭಾಷಣೆ
ನೆನಪಿನ ಪುಟ ಸೇರುವ ದಿನ
ನಿನ್ನ ಕರೆಯ ರಿಂಗಣಕ್ಕಾಗಿ
ಪರಿತಪಿಸಬೇಕಾಗುವ ದಿನ
ನೀನು ನನ್ನವಳಲ್ಲ ಎಂಬುದ
ಖಚಿತಪಡಿಸುವ ದಿನ
ಆ ದಿನಕ್ಕೆ ನನ್ನ ಧಿಕ್ಕಾರವಿರಲಿ
ಆ ಕ್ಷಣಕ್ಕೆ ನನ್ನ ಶಾಪವಿರಲಿ..

ರಚನೆ: ನವೀನ ಬೂದನೂರು

ತಿದ್ದಿದವರು, ತೀಡಿದವರು
ವಿದ್ಯೆ ಕಲಿಸಿ ಬುದ್ದಿ ನೀಡಿದವರು
ಓದಿಸಿದವರು ಬರೆಯಿಸಿದವರು
ಗೆದ್ದಾಗ ಬೆನ್ನು ತಟ್ಟಿದವರು
ಶಿಕ್ಷಿಸಿದವರು ಭಿಕ್ಷೆಯಿತ್ತವರು
ಬಿದ್ದಾಗ ಮೇಲಕ್ಕೆತ್ತಿದವರು
ಕೈಹಿಡಿದವರು ಮುನ್ನಡೆಸಿದವರು
ಅಂಧಕಾರವ ತೊಲಗಿಸಿದವರು
ಅಜ್ಞಾನ ಅಳಿಸಿ, ಸುಜ್ಞಾನ ಬೆಳೆಸಿ
ಅರಿವಿನ ಬೆಳಕು ನೀಡಿದವರು
ಅಶಾಂತಿ ತೊಲಗಿಸಿ, ಶಾಂತಿ ನೆಲೆಸಿ
ಬದುಕಿನ ಮಾರ್ಗ ತೋರಿದವರು
ಇವರು ನನ್ನವರು, ನನ್ನ ಶಿಕ್ಷಕರು..

ರಚನೆ: ನವೀನ ಬೂದನೂರು

ಅವಳೆಂದೂ ಈ ಪ್ರೀತಿಯ
ಬಯಸಲಿಲ್ಲ,  ಆ
ಆಲೋಚನೆಯನೂ ಮಾಡಲಿಲ್ಲ
ಎಲ್ಲವನೂ ನಿನಗೆ ನೀನೇ
ಕಲ್ಪಿಸಿಕೊಂಡೆಯಲ್ಲ..
ನಿನ್ನೀ ಕೃತ್ಯಗಳಿಗೆ ಅವಳ
ದೂಷಿಸುವುದೇಕೆ?
ನಿನ್ನಂತರಾತ್ಮವ ಮೊದಲು
ನೀನು ಗೌರವಿಸಬಾರದೇಕೆ?
ತನ್ನ ತಾನೇ ಗೌರವಿಸಿಕೊಳ್ಳದವ
ಇತರರಿಂದ ಎಲ್ಲವನೂ
 ನಿರೀಕ್ಷಿಸುವುದೇಕೆ?
ಅವಳು ನಿನ್ನವಳಲ್ಲ ಎಂಬ
ಸತ್ಯವ ಒಪ್ಪಿಕೊಳ್ಳಲಾರೆಯೇಕೆ?

ರಚನೆ: ನವೀನ ಬೂದನೂರು
ನಾ ಅರಿತಿರುವೆ ಗೆಳತಿ
ನನ್ನೆಡಿಗಿನ ನಿನ್ನ ನಿಲುವು
ಅಚಲವಾಗಿದೆಯೆಂದು,
ಮತ್ತೆಂದೂ ಮುಂದಿಡಲಾರೆ
ಈ ಪ್ರೇಮ ನಿವೇದನೆಯನು
ನಿನ್ನೀ ಮುದ್ದು ಮೊಗ
ಹೀಗೆಯ ನಗುತಲಿರಲಿ
ನೀ ಬಯಸಿದವರೊಡನೆ
ಈ ಬಾಳ ಪಯಣ ಸಾಗಲಿ
ಮತ್ತೆಂದು ಬಾರದಿರಲಿ
ನನ್ನೀ ಸೋತ ಮುಖ ನಿನ್ನ
ಸ್ಮೃತಿಪಟಲದಲ್ಲಿ...

ರಚನೆ: ನವೀನ ಬೂದನೂರು
ಎಲ್ಲೋ ಕೇಳಿದಂತಿತ್ತು
ಮೊದಲ ನೋಟದಲ್ಲೇ
ಪ್ರೀತಿಯಾಗುತ್ತದೆಂದು..
ನಿನ್ನ ನೋಡಿದೊಡನೆಯೇ
ನನಗರಿವಾಯಿತು ಅದು
ನಿಜವೇನೋ ಎಂದು..!
ನೀ ಕಂಡ ಕ್ಷಣವೇ
ಈ ಹೃದಯ ಕರಗಿತ್ತು!
ನಿನ್ನೀ ನಗುವಿಗೆ ಸೋತ ಮನ
ನಿನ್ನೊಲವಿನೆಡೆಗೆ ವಾಲಿತ್ತು!
ನಿನ್ನ ಸಂಗವೊಂದಿದ್ದರೆ
ಬೇರೇನೂ ಬೇಡವೆನಿಸಿತ್ತು!

ರಚನೆ: ನವೀನ ಬೂದನೂರು
ಭಾವನೆಗಳೇ ಆತ್ಮಹತ್ಯೆಗೆ
ಶರಣಾಗಿರುವಾಗ
ಕವಿತೆ ಬರೆಯಲು ಆಸ್ಪದವೆಲ್ಲಿ
ತಡೆಯ ಬಯಸಿರುವೆ
ಈ ಮನದ ಮಾತುಗಳ
ಭಾವನೆಗಳಿಗೆ ಸೇತುವೆಯಾದ
 ಈ ಕವಿತೆಗಳ
ಹೇಳಬೇಕೆಂದಿರುವೆ
ವಿದಾಯದ ನುಡಿಗಳ...
ಖಾಲಿಯಾದ ಹೃದಯ ನಿಮ್ಮ
ಸೃಷ್ಟಿಸಲು ಅನರ್ಹವೆಂದು..
ಹೃದಯ ತುಂಬಿದೊಡನೆಯೇ
ನಿಮ್ಮ ಸೃಷ್ಟಿಸುವೆನೆಂದು..

ರಚನೆ: ನವೀನ ಬೂದನೂರು

ನಾ ಯಾವಾಗ್ಲೂ ನಗ್ತೀನಿ
ನನಿಗ್ ನೋವಿಲ್ಲ ಅಂತಾಲ್ಲ
ನಿನಿಗ್ ನೋವು ಕೊಡ್ಬಾರ್ದಂತಾ..
ನೀ ಅತ್ರಾ ನನ್ ನೋವು
ದುಪ್ಪಟ್ಟಕ್ಕಾತಿ..
ನಿನ್ ನಗು ಮಾತ್ರ ಹಿಂಗಾ ಇರ್ಲಿ
ನೋವೇನಿದ್ರು ನನಿಗ್ಯ ಇರ್ಲಿ
ನಾ ಸಾಯೋವರ್ಗಿನೂ ನೀ
ನಕ್ಕಂತಾ ಇರಾದ್ನ ನೋಡಂಗಾಗ್ಲಿ
ನಾ ಸತ್ತಾಗ್ಲೂ ನೀ ಕಣ್ಣೀರಾಕಿದ್ರ
ನನ್ನಾತ್ಮಕ್ಕ ಮುಕ್ತಿ ಸಿಗ್ದಂಗಿರ್ಲಿ

- ನವೀನ ಬೂದನೂರು
ನನ್ನ  ಪ್ರೀತಿಯ ಒಂದು
ಭಾಗದಷ್ಟೂ ನೀ ನನ್ನ
ಪ್ರೀತಿಸಲಿಲ್ಲ..
ಅದಕ್ಕೆಂದೂ ನಾ
ಬೇಸರಿಸಿಕೊಂಡಿಲ್ಲ..
ನೀ ದೂರವಾಗುವ ದಿನ
ನೆನೆದಾಗ  ಮನ ತುಂಬಿ
ಬರುವುದಲ್ಲ..?
ನಮ್ಮೀ ಅಗಲಿಕೆ ಶಾಶ್ವತ
ಎಂಬುದೊಂದೇ ಈ
ನೋವಿನ ಮೂಲ..

ರಚನೆ: ನವೀನ ಬೂದನೂರು


ನಾವು ದೂರಕ್ಕಾವಿ ಅನ್ನಾದ್ನ
ನೆನಿಸ್ಕ್ಯಂಡ್ರ ಎದಿ ನಡುಗತೈತಿ
ಮನ್ಸಿನ್ ಮೂಲ್ಯಾಗಿದ್ ದುಃಖ
ಕಣ್ಣೀರಾಗಿ ಹೊರಾಗ ಬರ್ತೈತಿ
ನೀ ಸಿಗಲ್ಲ ಅಂತಾ ಗೊತ್ತಿದ್ರು
ಇಷ್ಟಪಟ್ಟ ಈ ಹೃದಯಾನ
ಬಾಯಿಗ್ ಬಂದಂಗ ಬೈಬೇಕು
ಅನ್ನುಸ್ತೈತಿ..
ಆ ಹೃದಯನ ನೀನು ಅನ್ನಾದು
ನೆನುಪಾದಾಗಂತು ಮನುಸು
ಮೂಕಾಗ್ಬಿಡ್ತಾತಿ...
ಮುಂದಿನ ಜನ್ಮುಕ್ಕರ ನೀ
ನನಿಗ್ಯ ಸಿಗ್ಲಿ ಅಂತಾ ಆ
ದೇವ್ರಿಗ್ಯ ಅರ್ಜಿ  ಹಾಕ್ಬೇಕಾಗೇತಿ

ರಚನೆ: ನವೀನ ಬೂದನೂರು

ಓ ಮುದ್ದು ಮೌನವೇ
ನಾನೆಂದರೆ ನಿನಗದೆಷ್ಟು ಅಕ್ಕರೆ
ನನ್ನವರೇ ನನ್ನಿಂದ ದೂರಹೋದರೂ
ನೀ ಮಾತ್ರ ನನ್ನ ಸಂಗವ ತೊರೆಯಲಿಲ್ಲ
ನನ್ನ ಕೋಪದಲ್ಲಿ, ಬೇಸರದಲ್ಲಿ, ನೋವಲ್ಲಿ
ನೀ ನನ್ನೊಡನೆಯೇ ಇರುವೆಯಲ್ಲ
ಮೂರ್ಖರು ವಾದಕ್ಕಿಳಿದಾಗಲೂ
ನೀ ನನಗೆ ಜೊತೆಯಾಗುವೆಯಲ್ಲ
ನನ್ನಿಂದ ದೂರಾಗುವ ಪ್ರಯತ್ನವನೂ
 ನೀ ಎಂದಿಗೂ ಮಾಡಲಿಲ್ಲ
ನಮ್ಮಿಬ್ಬರ ಮೈತ್ರಿ ಅದೆಷ್ಟು ಜನ್ಮಗಳದ್ದೋ
ನಾನಂತೂ ತಿಳಿದಿಲ್ಲ..

ರಚನೆ: ನವೀನ ಬೂದನೂರು
ನೀ ಒಮ್ಮಿನೂ ನನ್ನಿಷ್ಟಪಡ್ಲಿಲ್ಲ
ನನ್ ಭಾವನೆಗೆ ಬೆಲಿ ಕೊಡ್ಲಿಲ್ಲ
ನನ್ ಹಿಂದ ಬರ್ಲಿಲ್ಲ,
ನನಿಗಾಗಿ ಕಾಯ್ಲಿಲ್ಲ
ಆದ್ರೂ ನೀ ಬಂದಾಗೆಲ್ಲ
ನನ್ ಮನ್ಸು ಹಾರಾಡ್ತೈತಿ,
ಕುಣೀತೈತಿ, ಖುಷಿಪಡ್ತಾತಿ
ನೀ ನಕ್ರ ಅದೂ ನಗ್ತಾತಿ
ನೀ ಅತ್ರ ಅದೂ ಅಳ್ತಾತಿ
ನೀ ನೊಂದ್ಕಂಡ್ರ ಅದೂ
 ನೊಂದ್ಕಂತಾತಿ
ಒಂದಿನನರ ನೀ ಇಷ್ಟಪಟ್ಟು
ಬರ್ತಿ ಅಂತಾ ಕಾಯಕತ್ತೇತಿ,
ಈ ಜಗತ್ನ ಮರ್ತು...

ರಚನೆ: ನವೀನ ಬೂದನೂರು

ತಾಯಿ ಇವಳು
ಪ್ರತಿಭೆಗಳ ಗುರುತಿಸಿ
ಕೌಶಲ್ಯಗಳ ಬೆಳಸಿದವಳು
ಮೌಲ್ಯಗಳ ನೀಡಿ
ಸಂಸ್ಕಾರವನು ತಿಳಿಸಿದವಳು
ಜೀವನದ ಪಾಠ ಕಲಿಸಿ
ಬದುಕಿಗೆ ನೆರವಾದವಳು
ದುರ್ಬಲರ ಪಾಲಿನ
 ಆಶಾಕಿರಣವಾಗಿ ಗುರಿ
ಸಾಧನೆಗೆ ದಾರಿ ದೀಪವಾದವಳು
ಕರುಣೆಯ ಕಡಲಿನಂತೆ
ಬಯಸಿದ ಎಲ್ಲವನ್ನೂ
ಮನಃಪೂರ್ವಕವಾಗಿ
ನೀಡಿದವಳು
ನಮ್ಮ ತಾಯಿ ಇವಳು..

ರಚನೆ: ನವೀನ ಬೂದನೂರು
ಸಿಗದ ಪ್ರೀತಿಯ
ಬಯಸುವೆಯೇಕೆ?
 ಅವಳೆಡೆಗೆ ನಿನ್ನೀ
ತುಡಿಯುವೇಕೆ?
ಇಲ್ಲದ ಪ್ರೀತಿಯ ಹುಡುಕುವ
ಈ ಪ್ರಯತ್ನವೇಕೆ?
ಅವಳ ನಗುವಿನಲ್ಲಿಯೇ
ನಿನ್ನ ಖುಷಿ ಕಾಣಬಾರದೇಕೆ?
ಮೊದಲು ನಿನ್ನ ನೀನು
ಪ್ರೀತಿಸಿಕೊಳ್ಳಬಾರದೇಕೆ?

ರಚನೆ: ನವೀನ ಬೂದನೂರು

ನಿನ್ನ ನೆನದಾಗೊಮ್ಮೆ ಕವನ
ಬರೀಬೇಕು ಅನ್ನಿಸ್ತೈತಿ
ನಿನ್ನ ನೋಡಿದಾಗ್ಲೆಲ್ಲ ಮನಸು
ಗರಿಬಿಚ್ಚಿ ಕುಣಿಯಾಕ
ಶುರುಮಾಡತೈತಿ...
ನೀ ನಕ್ಕಾಗೆಲ್ಲ ಹೃದಯ ಜೀಕಿ
ಜೋಕಾಲಿಯಾಡತೈತಿ..
ನೀ ಮಾತಾಡಿದ್ರ ಸುಮ್ನ ಕುಂತು
ಕೇಳ್ಬೇಕು ಅನ್ನಿಸ್ತೈತಿ
ಪ್ರೀತಿ ಅಂದ್ರ ವಿಸ್ಮಯ ಅಂತಾ
ಈಗ ಖಾತ್ರಿಯಾಗೇತಿ...

- ನವೀನ ಬೂದನೂರು

ಒಡಲಾಳದ ನೋವು ಕರಗಿ
ಸಂತಸದ ಹೊಳೆ ಹರಿಯಲಿ
ವಿರಸವೆಂಬ ಜ್ವಾಲೆ ಹೊತ್ತದೆ
 ಬಾಳ ಪಯಣ ಸಾಗಲಿ
ಪ್ರೀತಿಯೊಂದು ಚಿಗುರೊಡೆದು
ಹೆಮ್ಮರವಾಗಿ ಬೆಳೆಯಲಿ
ಕಂಡ ಕನಸು ಜ್ಯೋತಿಯಾಗಿ
ಜಗವನದು ಬೆಳಗಲಿ
ಮುದ್ದು ಮನದ ಪುಟ್ಟ ಜೀವ
ನಗು ನಗುತ ಬಾಳಲಿ..

ರಚನೆ: ನವೀನ ಬೂದನೂರು
ನೀನಿರದ ಜಗತ್ತಿನಲಿ
ವಿಹರಿಸಬೇಕಾದೀತೆಂದು
ನಾನೆಂದಿಗೂ ನಿರೀಕ್ಷಿಸಿರಲಿಲ್ಲ.
ನನ್ನೂರಿನ ಮನೆಯಲ್ಲಿಯೇ
ನೀನಿರುವೆ ಎಂಬ ಸಮಾಧಾನ
ನಿನ್ನ ನೆನೆದಾಗಲೆಲ್ಲ..
ಅದಕೆಂದೇ ನಾನೆಂದಿಗೂ ಅಲ್ಲಿಗೆ
ಹೋಗಬಯಸುವುದಿಲ್ಲ..
ನೀನಿಲ್ಲದ ಆ ಮನೆ
ದೇವರಿಲ್ಲದ ಗುಡಿಯಂತಾಗಿದೆಯಲ್ಲ
ಮತ್ತೆ ನಿನ್ನ ಮಗನಾಗೇ ಜನಿಸುವೆ
ಮುಂದಿನ ಜನುಮದಲ್ಲಿ..
ಮಗುವಂತೆ ಕಾಪಾಡುವೆ ನನ್ನ ಅಂಗೈಯಲ್ಲಿ..

ರಚನೆ: ನವೀನ ಬೂದನೂರು
ನಿನ್ನ ಕಂಗಳಲ್ಲೇ
ಮಗುವಿನ ನಗುವಿದೆ
ಆ ನೋಟದಲ್ಲಿ ಎಲ್ಲರ
ಪ್ರೀತಿಸುವ ಗುಣವಿದೆ..
ನಿನ್ನೀ ವದನದಲ್ಲಿ
ಮುಗ್ಧತೆಯೇ ತುಂಬಿದೆ
ಆ ನಗುವ ತೀವ್ರತೆಗೆ ಅಳುವ
ಮರೆಸುವ ಶಕ್ತಿಯಿದೆ..
ಎಂದಿಗೂ ಬಾಡಿದಿರಲಿ
ನಿನ್ನೀ ನಗು ಮೊಗ
ಎಂದೆಂದಿಗೂ ನೊಂದಕೊಳ್ಳದಿರಲಿ
ಆ ನಿನ್ನ ಮಗುವಿನಂಥ ಮನ..

ರಚನೆ: ನವೀನ ಬೂದನೂರು

ನೀ ಪ್ರೀತಿಸಿದರಷ್ಟೇ ನಾ
ಪ್ರೀತಿಸಬೇಕೆಂದೇನು ಇಲ್ಲವಲ್ಲ
ಕೊಟ್ಟು ತೆಗೆದುಕೊಳ್ಳುವ
ವ್ಯವಹಾರ ಪ್ರೀತಿಯಲ್ಲವಲ್ಲ
ಏನನ್ನೂ ನಿರಿಕ್ಷಿಸದಿರುವುದೇ
ಪ್ರೀತಿಯೆಂದಾದ ಮೇಲೆ
ನಾನೇಕೆ ಪ್ರೀತಿಸುವುದ ನಿಲ್ಲಿಸಲಿ?
ನಾನಿನ್ನ ಪ್ರೀತಿಸುವೆ ನೀ
ಜೊತೆಗಿದ್ದರೂ; ಇರದಿದ್ದರೂ..

ರಚನೆ: ನವೀನ ಬೂದನೂರು

ನಿನ್ನ ಸೌಂದರ್ಯಕ್ಕೆ
ಮರುಳಾದ ನಾನು
ವಿಸ್ಮಿತನಾಗಿ ಕುಳಿತಿರುವೆ..
ನಿನ್ನ ಹಸಿರಿನಲೇ ನನ್ನ
ಉಸಿರ ನೆನೆದಿರುವೆ..
ನಿನ್ನ ಮಡಿಲಲಿ ಬೆಳೆದ
ನಾನೇ ಧನ್ಯನೆಂದು ಮರೆದಿರುವೆ
ಇನ್ನೊಂದು ಜನುಮವೂ
ನಿನ್ನೊಡಲಲ್ಲಿಯೇ ಜನಿಸಬೇಕೆಂದು
ಹಂಬಲಿಸುತಿರುವೆ..
ರಚನೆ: ನವೀನ ಬೂದನೂರು

ಹತ್ತಿರ ಬಂದಷ್ಟು ದೂರ ನಿಲ್ಲುವೆಯೇಕೆ?
ನನ್ನೆಡೆಗೆ ನಿನ್ನೀ ಉದಾಸೀನತೆಯೇಕೆ?
ನಿನ್ನೊಳಗಿನ ಈ ಮೌನಕ್ಕೆ ಕಾರಣವೇನು?
ನಿನ್ನೊಲವನರಸಿದ್ದೇ ನನ್ನ ತಪ್ಪೇನು?
ಈ ತಿರಸ್ಕಾರಗಳಲ್ಲೂ ಮನ
ನಿನ್ನನೇ ಬಯಸಿದೆಯೇಕೆ?
ನಾ ತಿಳಿದಿರುವೆ ಗೆಳತಿ ನಾನಿಲ್ಲದೆಯೂ
ನೀ ಸಂತಸದಿಂದಿರುವೆಯೆಂದು..
ಅದ ತಿಳಿದೇ ನಿರ್ಧರಿಸಿರುವೆ
ನಿನ್ನಿಂದ ದೂರಾಗಬೇಕೆಂದು..
ಮತ್ತೆಂದೂ ನಿನ್ನಡೆಗೆ ಸುಳಿಯಬಾರದೆಂದು;
ನಿನ್ನೊಲವ ಬಯಸಬಾರದೆಂದು..
ಸದಾ ಬಯಸುವೆ ನೀ ಸುಖವಾಗಿರಲೆಂದು..

ರಚನೆ: ನವೀನ ಬೂದನೂರು

ನಿನ್ನ ನಯನಗಳ ಸೆಳೆತ
ನನ್ನ ಮನವನ್ನೇ ಮೂಕವಾಗಿಸಿದೆ..
ಆ ನೋಟದ ತೀವ್ರತೆಗೆ ಜಗವನೇ
ಮರೆಸುವ ಶಕ್ತಿಯಿದೆ..
ಬೇಸರಗೊಂಡ ನಿನ್ನ ಮೊಗ
ನನ್ನ ಬುದ್ದಿಯನೇ ಮಂಕಾಗಿಸಿದೆ..
ಪ್ರತಿಕ್ಷಣವೂ ಈ ಮನ
ನಿನ್ನ ಸನಿಹವನೇ ಬಯಸುತಿದೆ..
ನಿನ್ನ ಸಾನಿಧ್ಯವೊಂದಿದ್ದರೆ
ಈ ಜಗದ ಹಂಗೇ ಬೇಡವೆನಿಸಿದೆ..
ನಿನಗಾಗಿ ಪರಿತಪಿಸುತಿರುವ ಈ
ಹೃದಯವನೊಮ್ಮೆ ತಣಿಸುವೆಯೇನು?
ಮನದೊಳಗಿನ ಸಂಘರ್ಷಗಳಿಗೆ
ಪರಿಹಾರ ಒದಗಿಸುವೆಯೇನು?

ರಚನೆ: ನವೀನ ಬೂದನೂರು

ಎಲ್ಲವೂ ನಿನ್ನದಾಗಬೇಕೆಂದುಕೊಂಡದ್ದು
ನಿನ್ನ ತಪ್ಪಲ್ಲವೇನು?
ದೇವರ ಕೈಯಲ್ಲಿನ ಹೂ ಯಾರಿಗೆ
ಸೇರಬೇಕೆಂಬ ಇಚ್ಚೆ ಅವನದಲ್ಲವೇನು?
ಅದಕ್ಕಾಗಿ ಈ ಹಾರಾಟವೇಕೆ?
ಚೀರಾಟವೇಕೆ?
ನಿನ್ನದಾಗಬೇಕೆಂದಿದ್ದರೆ,
 ಅದು ನಿನ್ನದೆಯಲ್ಲವೇನು?
ನೊಂದಕೊಳ್ಳದಿರು; ಅಂಗಲಾಚದಿರು..

ರಚನೆ: ನವೀನ ಬೂದನೂರು
ಪಂಡಿತ್ ಪುಟ್ಟರಾಜ ಗವಾಯಿಗಳು

ನಿನ್ನ ಗಾನ ಮಾಧುರ್ಯಕ್ಕೆ ಶರಣು ಹೋಗದವರಿಲ್ಲ
ಬೇಡಿ ಬಂದವರಿಗೆ ಕರುಣೆ ತೋರಿದೆಯಲ್ಲ
ಅಂಧರ ಪಾಲಿನ ಆಶಾಕಿರಣವಾಗಿ
ನೊಂದ ಮನಗಳಿಗೆ ಗಾನಾಮೃತವುಣಿಸಿದೆಯಲ್ಲ
ಗುರುವಿನ ನೆಚ್ಚಿನ ಶಿಷ್ಯನಾಗಿ
ಅಶಕ್ತರ ಪಾಲಿನ ಶಕ್ತಿಯ ಗಣಿಯಾದೆಯಲ್ಲ
ಸಂಗೀತ ಲೋಕದ ಗಾನ ಗಾರುಡಿಗನಾಗಿ
ಮಧುರ ಕಂಠದಿಂದ ನಮ್ಮೆದೆಯ ತುಂಬಿದೆಯಲ್ಲ
ಕನ್ನಡಿಗರ ಹೃದಯ ಸಾಮ್ರಾಟನಾಗಿ
ನಿನ್ನ ಸ್ವರದಿಂದಲೇ ನಮ್ಮ ಮರುಳರಾಗಿಸಿದೆಯಲ್ಲ
ವೈಕಲ್ಯಗಳ ಮಧ್ಯೆಯೂ ಕೌಶಲ್ಯಗಳ ಬೆಳೆಸಿದ ಗುರುವೇ...
ನಿನ್ನ ನೆನೆಯದೇ ಈ ಜೀವಕೆ ತೃಪ್ತಿಯಿಲ್ಲ; ಮುಕ್ತಿಯಿಲ್ಲ..

ರಚನೆ: ನವೀನ ಬೂದನೂರು

ಓಡುತಿರುವ ಮನದ ಕುದರೆಯ ತಡೆಯಲಾರೆಯೇನು?
ಹೃದಯದ ಪಿಸುಮಾತಿಗೆ
ಕಿವಿಗೊಡಲಾರೆಯೇನು?
ದೂರ ನಿಂತಷ್ಟು ಮನ ನಿನ್ನನೇ ಬಯಸಿದೆ
ನೀ ಅಲಕ್ಷಿಸಿದಷ್ಟು ಮನ ನಿನ್ನನೇ ಲಕ್ಷಿಸಿದೆ.
ಪ್ರೀತಿ ಸಿಗದ ಹೃದಯ ಮೂಖವೆನಿಸಿದೆ.

ರಚನೆ: ನವೀನ ಬೂದನೂರು

ಶ್ರೀ ಗುರುವೇ ಕೃಪೆಯಾಗು

ಗೊಂದಲಗಳ ಪರಿಹರಿಸಿ
ಅಜ್ಞಾ‌ನ ಅಳಿಸಿ ಸುಜ್ಞಾನ ಬೆಳೆಸಿ
ಅಂಧಕಾರಕ್ಕೆ ಅರಿವಿನ ಬೆಳಕು ನೀಡಿ
ಅಶಾಂತಿಯ ಅಳಿಸಿ ಶಾಂತಿಯ ನೆಲೆಸಿ
ದ್ವೇಷವ ತೆಗೆದು ಪ್ರೀತಿಯ ಬೆಳೆಸಿ
ಸ್ವಾಭಿಮಾನದ ಮೊಳಕೆಯೊಡೆಸಿ
ಗುರಿಗೆ ಸೂಕ್ತ ಮಾರ್ಗದರ್ಶನ ನೀಡಿ
ಬದುಕಿಗೆ ಆಶಾಕಿರಣವಾಗಿ
ಭವಿಷತ್ತಿಗೆ ಮುನ್ನುಡಿಯಾಗುವ
ಶ್ರೀ ಗುರುವೇ ಕೃಪೆಯಾಗು..

ರಚನೆ: ನವೀನ ಬೂದನೂರು
ಆ ಹೂವು ನಾಚುತಿಹುದು
 ನಿನ್ನ ಮುದ್ದು ಮೊಗವ ಕಂಡು.
ದೇವರ ಮೇಲೆ ಅದಕ್ಕೆ
ಮತ್ಸರವಾದರೂ
ಅಚ್ಚರಿಯಿಲ್ಲ ಗೆಳತಿ
ನಿನ್ನಂತಹ ಚೆಲುವ
ನೀಡಿಲ್ಲವೆಂದು
ಅದಕ್ಕೂ ತಿಳಿಸಿಬಿಡು
 ನಿನ್ನಂದದ ರಹಸ್ಯವನು
ಕೊಂಚವಾದರು ತೋರೀತೇನೋ
ನಿನ್ನೆಡೆಗೆ ಸಹನೆಯನು..

ರಚನೆ: ನವೀನ ಬೂದನೂರು
ನಾ ಕಂಡ ದೇವರುಗಳು

ನಾ ಕಂಡಿದ್ದೇನೆ ದೇವರನ್ನು
ನಮಗಾಗಿ ದುಡಿದ ತಂದೆಯಲ್ಲಿ
ನಮಗಾಗಿ ಮಿಡಿದ ತಾಯಿಯಲ್ಲಿ
ಜ್ಞಾನ ದಾಸೋಹ ಮಾಡಿದ ಗುರುವಿನಲ್ಲಿ
ಜೀವ ದಾನ ಮಾಡಿದ ವೈದ್ಯರಲ್ಲಿ
ದುಃಖದ ಮೂಲ ತಿಳಿಸಿದ ಬುದ್ಧನಲ್ಲಿ
ಕಾಯಕಯೋಗಿ ಬಸವಣ್ಣನಲ್ಲಿ
ಅಹಿಂಸೆಯ ಸಂದೇಶ ನೀಡಿದ ಗಾಂಧಿಯಲ್ಲಿ
ಸಮಾನತೆಗಾಗಿ ಶ್ರಮಿಸಿದ ಬಾಬಾ ಸಾಹೇಬರಲ್ಲಿ
ಮಾನವೀಯ ಮೌಲ್ಯಗಳ ಸಾರಿದ ದಾರ್ಶನಿಕರಲ್ಲಿ
ನಾ ನಿತ್ಯವೂ ದೇವರ ಕಾಣುತ್ತಿರುವೆ ಇವರೆಲ್ಲರಲಿ
ನಿಜಕ್ಕೂ ನಾ ಆಸ್ತಿಕ ಇವರೆಲ್ಲರ ವಿಷಯದಲ್ಲಿ

ರಚನೆ: ನವೀನ ಬೂದನೂರು

ಮುಂಜಾವಿನ ವೇಳೆಯಲಿ
ತಂಗಾಳಿಯ ತಂಪಿನಲಿ
ಹಕ್ಕಿಗಳ ಇಂಚರದಲಿ
ಬೆಳದಿಂಗಳ ಬೆಳಕಲಿ
ಪ್ರಶಾಂತವಾದ ಸ್ಥಳದಲಿ
ಕುಳಿತಿರವ ನನಗೆ
ಕಾಡುತಿದೆ ನಿನ್ನ ಅನುಪಸ್ಥಿತಿ
ನೀನಿಲ್ಲದ ಈ ತಂಗಾಳಿ
ನೀನಿಲ್ಲದ ಈ ಕಲರವ
ನೀನಿಲ್ಲದ ಈ ಬೆಳದಿಂಗಳು
ನೀನಿಲ್ಲದ ಈ ಪ್ರಶಾಂತತೆ
ನನಗೆ ತೃಣ ಮಾತ್ರ
ನೀನಿದ್ದರೆ ಇವುಗಳಿಗರ್ಥ
ನೀನಿರದ ಸ್ವರ್ಗವೂ ವ್ಯರ್ಥ..

ರಚನೆ: ನವೀನ ಬೂದನೂರು






ಪಯಣ

ನಡೆದಿರುವೆ ನನ್ನದೇ ದಾರಿಯಲಿ
ಮೈ ಕೊರೆಯುವ ಚಳಿಯಲಿ
ಸುಡು ಬಿಸಿಲ ಬೇಗೆಯಲಿ
ನಡುಕ ಹುಟ್ಟಿಸುವ ಮಳೆಯಲಿ
ಕಲ್ಲು ಮುಳ್ಳಿನ ದಾರಿಯಲಿ
ವರ್ಷಗಳಿಂದ ಪಯಣಿಸುತಿರುವೆ
ಆಸೆಗಳ ಪೂರೈಸಿಕೊಳ್ಳಲು
ಕನಸುಗಳ ನನಸಾಗಿಸಿಕೊಳ್ಳಲು
ದಾರಿ ಕೊಂಚ ದರ್ಗಮವೇ
ಆದರೂ ಸಾಗುತಿರುವೆ
ಗುರಿಮುಟ್ಟವ ಛಲದಿಂದ
ತೀರ ತಲುಪುವ ವಿಶ್ವಾಸದಿಂದ
ಒಂದೊಮ್ಮೆ ದಡ ತಲುಪಿದರೆ
ಈ ಪಯಣ ಸಾರ್ಥಕ..

ರಚನೆ: ನವೀನ ಬೂದನೂರು
ನನ್ನಿಂದ ನೀ ದೂರಾದ ಮಾತ್ರಕ್ಕೆ
ನಿನ್ನ ನಾ ದೂರುವೆನೇನು?
ಇದ್ದಷ್ಟು ಕಾಲ ನೀ ನೀಡಿದ್ದು
ಪ್ರೀತಿಯನ್ನೇ ಅಲ್ಲವೇನು?
ಉಪಚಾರ ಮಾಡಿದವರಿಗೆ
ಅಪಚಾರ ಬಯಸುವವ ನಾನೇನು?
ನೀ ಕೊಟ್ಟ ನೆನಪುಗಳ ಮರೆತರೆ
ನಾ ಕೃತಜ್ಞನಾಗುವುದಿಲ್ಲವೇನು?
ಸನ್ನಿವೇಶಗಳು ನಮ್ಮನ್ನಗಲಿಸಿದಾಗ
ನಿನ್ನ ದೂರಿ ಪ್ರಯೋಜನವೇನು?
ವೈರಿಯನ್ನೂ ಪ್ರೀತಿಸುವ ಹೃದಯ
ತನ್ನ ಆತ್ಮವನ್ನೇ ಶಪಿಸಲು ಸಾಧ್ಯವೇನು?
ಜೊತೆಗಿದ್ದಾಗ ಹೊಗಳಿ; ದೂರಾದಾಗ
ತೆಗಳಿದರೆ, ದೈವ ಮೆಚ್ಚವುದೇನು?

ರಚನೆ: ನವೀನ ಬೂದನೂರು

ಅವತರಿಸಿ ಬಾ

ನಮ್ಮನ್ನೇ ಸೃಷ್ಟಿಸಿದ ನೀನು
ನಮ್ಮ ಬಳಿಯೇ ಬೇಡುವೆಯೇನು?
ಜೀವಿಗಳ ಸೃಷ್ಟಿಸಿದ ನೀನು
ಅವುಗಳ ರುಚಿ ಸವಿಯಬೇಕೇನು?
ಎಲ್ಲರ ಕಾಯುವ ನೀನು
ಕೊಲ್ಲುವುದ ಸಹಿಸುವೆಯೇನು?
ಶಾಂತಿ ಪ್ರಿಯನಾದ ನೀನು
ನರಳಾಟವ ಆಲಿಸುವೆಯೇನು?
ಕರುಣಾಮಯಿಯಾದ ನೀನು
ಕಠೋರನಾಗುವೆಯೇನು?
ರಕ್ಷಕನಾಗುವ ಬದಲು
ಭಕ್ಷಕನಾಗುವೆಯೇನು?
ತ್ರಿಲೋಕ ಜ್ಞಾನಿಯಾದ ನಿನಗೆ
ಮಧ್ಯವರ್ತಿಗಳು ಬೇಕೇನು?
ಸರ್ವವ್ಯಾಪಿಯಾದ ನೀನು
ಶಾಖೆಗಳ ಸ್ಥಾಪಿಸಿಕೊಂಡಿರವೆಯೇಕೆ?
ಅವತರಿಸು ಬಾ ತಂದೆ
ಅಧರ್ಮವ ಅಳಿಸಿ,
ಧರ್ಮ ಸಂಸ್ಥಾಪಿಸಲು
ಅಶಾಂತಿಯ ತೊಲಗಿಸಿ
ಶಾಂತಿಯ ನೆಲೆಗೊಳಿಸಲು
ದುಷ್ಟರ ಶಿಕ್ಷಿಸಿ, ಶಿಷ್ಟರ ರಕ್ಷಿಸಲು..

ರಚನೆ: ನವೀನ ಬೂದನೂರು


ಬಾಹುಬಲಿ

ರಾಜ್ಯದ ಮೇಲಿನ ವ್ಯಾಮೋಹಕ್ಕಾಗಿ
ಅಣ್ಣನೊಡನೆ ಕಾದಾಡಿ
ಎಲ್ಲದರಲ್ಲೂ ಜಯಗಳಿಸಿ
ಕೊನೆಗೆ ನಿನ್ನ ಕೃತ್ಯಕ್ಕೆ ಕ್ಷಣದಲ್ಲೆ ಮರುಗಿ
ಸಂಬಂಧಗಳಿಗೆ ಕೊಳ್ಳಿಯಿಡುವ
ರಾಜ್ಯಲಕ್ಷ್ಮಿಯ ತ್ಯಜಿಸಿ
ವಿವಸ್ತ್ರವಾಗಿ, ಮೌನದಿಂದ ನಿಂತಿರುವ
ಮಾನವೀಯ ಮೌಲ್ಯಗಳ
ಮೆರೆದ ಪ್ರೇಮ ಮೂರ್ತಿಯೇ
ನಿನಗಿದೋ ನನ್ನ ನಮನ

ರಚನೆ: ನವೀನ ಬೂದನೂರು

ಉಸಿರನಿತ್ತವಳು

ತನ್ನ ಜೀವ ಪಣಕ್ಕಿಟ್ಟು
ನಮಗೆ ಜನ್ಮ ನೀಡಿದವಳು
ತನ್ನ ಮಡಿಲಿನಲಿ ನಮ್ಮ ಬೆಳೆಸಿದವಳು
ನಮ್ಮ ನಲಿವಿನಲಿ ತನ್ನ ನೋವ ಮರೆತವಳು
ಅಪ್ಪನ ಕೋಪದಿಂದ ನಮ್ಮ ರಕ್ಷಿಸಿದವಳು
ನಮ್ಮ ಭವಿಷ್ಯಕ್ಕೆ ತನ್ನ ವರ್ತಮಾನ ನೀಡಿದವಳು
ನಮ್ಮ ನೋವಿಗೆ ತಾನು ಕಂಬನಿ ಮಿಡಿದವಳು
ನಮ್ಮ ತಪ್ಪುಗಳ ತಿದ್ದಿ ತೀಡಿದವಳು
ನಮ್ಮ ಬದುಕಿಗೆ ಸಂಸ್ಕಾರ ನೀಡಿದವಳು
ನಿಷ್ಕಾರಣವಾಗಿ ಪ್ರೀತಿಸಿದವಳು
ಸೋಲು-ಗೆಲುವಿನಲಿ ಬೆನ್ನಿಗೆ ನಿಂತವಳು
ಸಹನೆಯ ಕಡಲಿವಳು
ಮಮತೆಯ ಮಾತೆಯಿವಳು
ಭೂಮಿಯ ತೂಕದವಳು
ನನಗೆ ಜನ್ಮಕೊಟ್ಟವಳು; ಉಸಿರನಿತ್ತವಳು..

ರಚನೆ : ನವೀನ ಬೂದನೂರು












ಇವಳು ನನ್ನವಳು
ಕಣ್ಣಲ್ಲೇ ಕೊಲ್ಲುವವಳು
ಅನುರಾಗ ಅರಳಿಸುವವಳು
ಬಳ್ಳಿಯಂತೆ ಬಳುಕುವವಳು
ನವಿಲನ್ನೂ ನಾಚಿಸುವವಳು
ಕನಸಲೂ ಕಾಡುವವಳು
ಚಂದಿರನ ಮೊಗದವಳು
ಮಗುವಿನ ಮನದವಳು
ಗುಲಾಬಿಯ ನಗುವಿನವಳು
ಕಡಲೊಳಗಿನ ಮುತ್ತಿವಳು
ಪ್ರಶಾಂತ ಮನದವಳು
ನನ್ನ ಹೃದಯ ಕದ್ದವಳು;
ಮನಸು ಗೆದ್ದವಳು
ಇವಳು ನನ್ನವಳು..

ರಚನೆ: ನವೀನ ಬೂದನೂರು

ಗಾಂಧಿ
ಪ್ರತಿಯೊಂದು ನಿನ್ನ ಬಳಿಯಿತ್ತು
ಅಪಾರವಾದ ಪಾಂಡಿತ್ಯವಿತ್ತು
ಅಚ್ಚುಕಟ್ಟಾದ ಕುಟುಂಬವಿತ್ತು
ಜೀವನ ನಡೆಸಲು ವಕೀಲಿ ವೃತ್ತಿಯಿತ್ತು
ತಂದೆ-ತಾಯಿಯರ ಹಾರೈಕೆಯಿತ್ತು
ಜೊತೆಗೆ ಅವರು ಕಲಿಸಿದ ಸಂಸ್ಕೃತಿಯಿತ್ತು;
 ಸಂಸ್ಕಾರವಿತ್ತು
ಆದರೂ
ನೀನೇಕೆ ಬೀದಿಗಿಳಿಯಬೇಕಿತ್ತು
ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಿತ್ತು
ವೈಯಕ್ತಿಕ ನಿಂದನೆಗೆ ಗುರಿಯಾಗಬೇಕಿತ್ತು
ಮನೆಯಲ್ಲಿ ಕುಳಿತ ಟೀಕಿಸುವವರಿಗೇನು ಗೊತ್ತು
ದಾಸ್ಯ ಬದುಕಿನ ಗಮ್ಮತ್ತು
ನಾವಂತೂ ಮರೆತಿಲ್ಲ ನಿನ್ನ ಹೋರಾಟದ ನೀಯತ್ತು
ಆರಾಧಿಸುವೆವು ನಿನ್ನ ಯಾವತ್ತೂ...
ನೀನೇ ಅಲ್ಲವೇ ನಮ್ಮೆಲ್ಲರ ಸಂಪತ್ತು..

ರಚನೆ: ನವೀನ ಬೂದನೂರು

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ